Tuesday 25 September 2012

ಬೋಧಿಲೇರನ ಗಳಾಸು ಮತ್ತು ಕುಲುಮೆಯೊಂದರ ಸ್ವಗತ "

ಯಾವ ಆವಾಹನೆಗೂ ತಲೆಕೊಡದ ಗವ್ವೆನ್ನುವ ಬೆಳಕಿಗೂ ಅಸು ತೊರೆವ ಆಸೆ,
ಇನ್ನೆಷ್ಟೊತ್ತು ಉರಿಯುವುದು ಧಿವಿಧಿವಿಯೆಂದು, ಯಾರಿಗೂ ಬೇಡದ ಬೆಳಕದು..
ಆರಿಸುವರೂ ಇಲ್ಲದ, ಆತ್ಮವಷ್ಟೇ ಚಲಿಸುವ ಒಣಗಿದ ನೆಲದಲ್ಲಿ ಪರದೇಸಿ ಬೆಳಕು.

ಯಾರೋ ಬರುವವರಿದ್ದಾರೆ, ಗಾಳಿಬೀಸುವ ಸದ್ದಿಗೂ ಕಾಯುವ ತೆವಲು ಅಂಟುತ್ತದೆ,
ಹುಲ್ಲುಗರಿಕೆಯ ಚೂಪು ಬುರುಡೆಗೆ ಒಣಗಿದೆಲೆಯೊಂದು ಎದೆ ತಿವಿದುಕೊಂಡು ಬಿದ್ದುದು,
ಖಾಲಿ ಮುಂಡಕ್ಕೆ ಕಣ್ಣು ಕಿವಿಗಳನ್ನು ಅಂಟಿಸಿಕೊಳ್ಳುವ ಎಕ್ಕದಗಿಡಕ್ಕೂ ಆಶ್ಚರ್ಯವು..

ಒಡ್ಡಿದ ಕೈಗೆ ಬಿದ್ದಿಲ್ಲ ಮಣ್ಣು, ಯಾವಾಗ ಬೀಳುತ್ತದೋ ಸಂಕುಲವ ಪೊರೆದ ಮಣ್ಣಹುಡಿ,
ಒಳಗಿನ ಕೆಂಪುದ್ರವದೊಳಗೆ ಇಷ್ಟಾದರೂ ಬೆರೆಯಬಾರದೇ ಎಲ್ಲವನ್ನೂ ಬೆಳೆವ ಮಣ್ಣು..
ಒಳಗೊಳ್ಳುವ, ಕಾಪಿಡುವ, ಕಟ್ಟಿಡುವ, ಪ್ರೇಮಿಸುವ ಮಣ್ಣಿಗೂ ಬಂತೇ ಇಂಥ ಅಹಮಿಕೆ.

ದಾರಿಹೋಕಳ ಚಪ್ಪಲಿಯಿಲ್ಲದ ಹೆಜ್ಜೆಗುರುತುಗಳನ್ನು ಮೂಸುತ್ತವೆ ಸೀಳುನಾಯಿಗಳು,
ದಾರಿಯೂ ಮುಗಿದು, ಗುರುತೂ ಇಲ್ಲವಾದ ಬಿಂದುವಿನಲ್ಲಿ ಸುಂದರವಾಗಿ ಊಳಿಡುತ್ತವೆ,
ಜೀವ ಉಳಿದದ್ದು ಅವಳಿಗೂ ತಿಳಿಯಲಿಲ್ಲ, ಗುರುತಿಲ್ಲದ ಬಿಂದು ಇವಕ್ಕೂ ಅರ್ಥವಾಗಲಿಲ್ಲ.

ಸೆಗಣಿಯುಂಡೆಯ ಭೂಮಿ ಕಟ್ಟಿದ ಹುಳುವಿಗೆ ಅದನ್ನು ಸುಮ್ಮನೆ ಉರುಳಿಸುವ ಖಯಾಲು,
ವಿಸರ್ಜನೆಯ ಆವರ್ತಭೂಮಿ ಉರುಳುತ್ತಲೇ ತುದಿಗಳಿಗೆ ಚರ್ಮ ಬೆಳೆಯುತ್ತಿರಲಾಗಿ,
ಕಟ್ಟಿದ ಉಂಡೆ 
ಯಾವುದು, ಉರುಳುತ್ತಿರುವ ಉಂಡೆ ಯಾವುದು ಇಬ್ಬರಿಗೂ ಗೊಂದಲ.

ಗಿರಾಕಿಗಳೇ ನಾಪತ್ತೆಯಾದ ಕುಲುಮೆಯೊಂದರ ಸ್ವಗತಕ್ಕೆ ಇನ್ನೂ ಜೀವ ಸಿಗುತ್ತಿಲ್ಲವಂತೆ..
ತಿದಿಯೊತ್ತುವನೂ ಮಂಡಿಮೇಲೆ ನೊಸಲಿಟ್ಟು ಹುಟ್ಟದೆ ಇರುವವರಿಗಾಗಿ ಕಾಯುವ ರೀತಿಗೆ,
ಬೋಧಿಲೇರನ ಮಧ್ಯದ ಗಳಾಸಿನ ಎದೆಯೂ ಒಡೆದು ಚೂರೆದ್ದು ಹೋಗಿದ್ದು ಇತಿಹಾಸವು.



No comments:

Post a Comment