ಯಾವ ಆವಾಹನೆಗೂ ತಲೆಕೊಡದ ಗವ್ವೆನ್ನುವ ಬೆಳಕಿಗೂ ಅಸು ತೊರೆವ ಆಸೆ,
ಇನ್ನೆಷ್ಟೊತ್ತು ಉರಿಯುವುದು ಧಿವಿಧಿವಿಯೆಂದು, ಯಾರಿಗೂ ಬೇಡದ ಬೆಳಕದು..
ಆರಿಸುವರೂ ಇಲ್ಲದ, ಆತ್ಮವಷ್ಟೇ ಚಲಿಸುವ ಒಣಗಿದ ನೆಲದಲ್ಲಿ ಪರದೇಸಿ ಬೆಳಕು.
ಯಾರೋ ಬರುವವರಿದ್ದಾರೆ, ಗಾಳಿಬೀಸುವ ಸದ್ದಿಗೂ ಕಾಯುವ ತೆವಲು ಅಂಟುತ್ತದೆ,
ಹುಲ್ಲುಗರಿಕೆಯ ಚೂಪು ಬುರುಡೆಗೆ ಒಣಗಿದೆಲೆಯೊಂದು ಎದೆ ತಿವಿದುಕೊಂಡು ಬಿದ್ದುದು,
ಖಾಲಿ ಮುಂಡಕ್ಕೆ ಕಣ್ಣು ಕಿವಿಗಳನ್ನು ಅಂಟಿಸಿಕೊಳ್ಳುವ ಎಕ್ಕದಗಿಡಕ್ಕೂ ಆಶ್ಚರ್ಯವು..
ಒಡ್ಡಿದ ಕೈಗೆ ಬಿದ್ದಿಲ್ಲ ಮಣ್ಣು, ಯಾವಾಗ ಬೀಳುತ್ತದೋ ಸಂಕುಲವ ಪೊರೆದ ಮಣ್ಣಹುಡಿ,
ಒಳಗಿನ ಕೆಂಪುದ್ರವದೊಳಗೆ ಇಷ್ಟಾದರೂ ಬೆರೆಯಬಾರದೇ ಎಲ್ಲವನ್ನೂ ಬೆಳೆವ ಮಣ್ಣು..
ಒಳಗೊಳ್ಳುವ, ಕಾಪಿಡುವ, ಕಟ್ಟಿಡುವ, ಪ್ರೇಮಿಸುವ ಮಣ್ಣಿಗೂ ಬಂತೇ ಇಂಥ ಅಹಮಿಕೆ.
ದಾರಿಹೋಕಳ ಚಪ್ಪಲಿಯಿಲ್ಲದ ಹೆಜ್ಜೆಗುರುತುಗಳನ್ನು ಮೂಸುತ್ತವೆ ಸೀಳುನಾಯಿಗಳು,
ದಾರಿಯೂ ಮುಗಿದು, ಗುರುತೂ ಇಲ್ಲವಾದ ಬಿಂದುವಿನಲ್ಲಿ ಸುಂದರವಾಗಿ ಊಳಿಡುತ್ತವೆ,
ಜೀವ ಉಳಿದದ್ದು ಅವಳಿಗೂ ತಿಳಿಯಲಿಲ್ಲ, ಗುರುತಿಲ್ಲದ ಬಿಂದು ಇವಕ್ಕೂ ಅರ್ಥವಾಗಲಿಲ್ಲ.
ಸೆಗಣಿಯುಂಡೆಯ ಭೂಮಿ ಕಟ್ಟಿದ ಹುಳುವಿಗೆ ಅದನ್ನು ಸುಮ್ಮನೆ ಉರುಳಿಸುವ ಖಯಾಲು,
ವಿಸರ್ಜನೆಯ ಆವರ್ತಭೂಮಿ ಉರುಳುತ್ತಲೇ ತುದಿಗಳಿಗೆ ಚರ್ಮ ಬೆಳೆಯುತ್ತಿರಲಾಗಿ,
ಕಟ್ಟಿದ ಉಂಡೆ ಯಾವುದು, ಉರುಳುತ್ತಿರುವ ಉಂಡೆ ಯಾವುದು ಇಬ್ಬರಿಗೂ ಗೊಂದಲ.
ಗಿರಾಕಿಗಳೇ ನಾಪತ್ತೆಯಾದ ಕುಲುಮೆಯೊಂದರ ಸ್ವಗತಕ್ಕೆ ಇನ್ನೂ ಜೀವ ಸಿಗುತ್ತಿಲ್ಲವಂತೆ..
ತಿದಿಯೊತ್ತುವನೂ ಮಂಡಿಮೇಲೆ ನೊಸಲಿಟ್ಟು ಹುಟ್ಟದೆ ಇರುವವರಿಗಾಗಿ ಕಾಯುವ ರೀತಿಗೆ,
ಬೋಧಿಲೇರನ ಮಧ್ಯದ ಗಳಾಸಿನ ಎದೆಯೂ ಒಡೆದು ಚೂರೆದ್ದು ಹೋಗಿದ್ದು ಇತಿಹಾಸವು.

ಇನ್ನೆಷ್ಟೊತ್ತು ಉರಿಯುವುದು ಧಿವಿಧಿವಿಯೆಂದು, ಯಾರಿಗೂ ಬೇಡದ ಬೆಳಕದು..
ಆರಿಸುವರೂ ಇಲ್ಲದ, ಆತ್ಮವಷ್ಟೇ ಚಲಿಸುವ ಒಣಗಿದ ನೆಲದಲ್ಲಿ ಪರದೇಸಿ ಬೆಳಕು.
ಯಾರೋ ಬರುವವರಿದ್ದಾರೆ, ಗಾಳಿಬೀಸುವ ಸದ್ದಿಗೂ ಕಾಯುವ ತೆವಲು ಅಂಟುತ್ತದೆ,
ಹುಲ್ಲುಗರಿಕೆಯ ಚೂಪು ಬುರುಡೆಗೆ ಒಣಗಿದೆಲೆಯೊಂದು ಎದೆ ತಿವಿದುಕೊಂಡು ಬಿದ್ದುದು,
ಖಾಲಿ ಮುಂಡಕ್ಕೆ ಕಣ್ಣು ಕಿವಿಗಳನ್ನು ಅಂಟಿಸಿಕೊಳ್ಳುವ ಎಕ್ಕದಗಿಡಕ್ಕೂ ಆಶ್ಚರ್ಯವು..
ಒಡ್ಡಿದ ಕೈಗೆ ಬಿದ್ದಿಲ್ಲ ಮಣ್ಣು, ಯಾವಾಗ ಬೀಳುತ್ತದೋ ಸಂಕುಲವ ಪೊರೆದ ಮಣ್ಣಹುಡಿ,
ಒಳಗಿನ ಕೆಂಪುದ್ರವದೊಳಗೆ ಇಷ್ಟಾದರೂ ಬೆರೆಯಬಾರದೇ ಎಲ್ಲವನ್ನೂ ಬೆಳೆವ ಮಣ್ಣು..
ಒಳಗೊಳ್ಳುವ, ಕಾಪಿಡುವ, ಕಟ್ಟಿಡುವ, ಪ್ರೇಮಿಸುವ ಮಣ್ಣಿಗೂ ಬಂತೇ ಇಂಥ ಅಹಮಿಕೆ.
ದಾರಿಹೋಕಳ ಚಪ್ಪಲಿಯಿಲ್ಲದ ಹೆಜ್ಜೆಗುರುತುಗಳನ್ನು ಮೂಸುತ್ತವೆ ಸೀಳುನಾಯಿಗಳು,
ದಾರಿಯೂ ಮುಗಿದು, ಗುರುತೂ ಇಲ್ಲವಾದ ಬಿಂದುವಿನಲ್ಲಿ ಸುಂದರವಾಗಿ ಊಳಿಡುತ್ತವೆ,
ಜೀವ ಉಳಿದದ್ದು ಅವಳಿಗೂ ತಿಳಿಯಲಿಲ್ಲ, ಗುರುತಿಲ್ಲದ ಬಿಂದು ಇವಕ್ಕೂ ಅರ್ಥವಾಗಲಿಲ್ಲ.
ಸೆಗಣಿಯುಂಡೆಯ ಭೂಮಿ ಕಟ್ಟಿದ ಹುಳುವಿಗೆ ಅದನ್ನು ಸುಮ್ಮನೆ ಉರುಳಿಸುವ ಖಯಾಲು,
ವಿಸರ್ಜನೆಯ ಆವರ್ತಭೂಮಿ ಉರುಳುತ್ತಲೇ ತುದಿಗಳಿಗೆ ಚರ್ಮ ಬೆಳೆಯುತ್ತಿರಲಾಗಿ,
ಕಟ್ಟಿದ ಉಂಡೆ ಯಾವುದು, ಉರುಳುತ್ತಿರುವ ಉಂಡೆ ಯಾವುದು ಇಬ್ಬರಿಗೂ ಗೊಂದಲ.
ಗಿರಾಕಿಗಳೇ ನಾಪತ್ತೆಯಾದ ಕುಲುಮೆಯೊಂದರ ಸ್ವಗತಕ್ಕೆ ಇನ್ನೂ ಜೀವ ಸಿಗುತ್ತಿಲ್ಲವಂತೆ..
ತಿದಿಯೊತ್ತುವನೂ ಮಂಡಿಮೇಲೆ ನೊಸಲಿಟ್ಟು ಹುಟ್ಟದೆ ಇರುವವರಿಗಾಗಿ ಕಾಯುವ ರೀತಿಗೆ,
ಬೋಧಿಲೇರನ ಮಧ್ಯದ ಗಳಾಸಿನ ಎದೆಯೂ ಒಡೆದು ಚೂರೆದ್ದು ಹೋಗಿದ್ದು ಇತಿಹಾಸವು.














ಜೇಬಿನೊಳಗಿನ ದುಡ್ಡು ಮತ್ತು ಎಟಿಎಂ ಕಾರ್ಡುಗಳೂ ಸಹ ತನ್ನನ್ನು ನಿಯಂತ್ರಿಸಲು ಯತ್ನಿಸುತ್ತಿವೆ ಎಂದು ಭಯಗೊಳ್ಳುವ ಮೆಕಾಂಡ್ಲೆಸ್ ಅವೆರಡನ್ನೂ ಹರಿದು ಬೆಂಕಿಯಿಟ್ಟು ಬೆತ್ತಲೆ ಹೆಜ್ಜೆಗಳಿತ್ತ ಅಲಾಸ್ಕಾ ದಾರಿಯಲ್ಲಿನ ದುರ್ಗಮತೆಯತ್ತ ಪ್ರಕೃತಿಯನ್ನಷ್ಟೇ ನಂಬಿಕೊಂಡು ನಡೆಯಲು ಶುರುವಿಡುತ್ತಾನೆ.. ದಿಕ್ಕು ಸೂಚಿಸುವ ದಿಕ್ಸೂಚಿಯನ್ನೂ ಮುಟ್ಟದೆ ದೂರವಿಡುವ ಆತ ಅಲಾಸ್ಕಾದ ದಾರಿಯನ್ನೂ ತಾನೇ ಕಂಡುಕೊಳ್ಳುತ್ತ ನಡೆಯುತ್ತ ನಡೆಯುತ್ತ ತನ್ನಂತಹವರೇ ಬಹಳಷ್ಟು ಜನರನ್ನು ಸಂಧಿಸುತ್ತ ಅವರೊಡನೆ ಹರಟುತ್ತ, ಹುಡುಗಿಯೊಬ್ಬಳೊಟ್ಟಿಗೆ ಸೃಷ್ಟಿಯ ಪರಮೋದ್ದೇಶವಾದ ದೈಹಿಕಸಂಗಮಕ್ಕೂ ಒಳಗಾಗಿ, ಕಟ್ಟುಪಾಡುಗಳನ್ನು ಬೇಡುವ ಅವಳ ಪ್ರೇಮವನ್ನೂ ತ್ಯಜಿಸಿ, ನೀರು ಕಂಡಲ್ಲಿ ಕುಡಿಯುತ್ತ ಕೈಗೆ ಸಿಕ್ಕಿದ್ದನ್ನು ತಿಂದುಕೊಂಡು ಕೊನೆಗೆ ಡೆನಾಲಿ ನ್ಯಾಷನಲ್ ಪಾರ್ಕ್ ಬಳಿ ಕೆಟ್ಟು ನಿಂತಿದ್ದ ಹಳೆಯ ಶಾಲಾ ವಾಹನದೊಳಗೆ ತನ್ನ ಗುಡಾರವನ್ನು ಕಂಡುಕೊಳ್ಳುತ್ತಾನೆ. ಹತ್ತು ಪೌಂಡ್ ನಷ್ಟಿರುವ ಅಕ್ಕಿ, ಅಲಾಸ್ಕಾ ಸುತ್ತಮುತ್ತಲಿನ ಮರಗಿಡಗಳ ಕುರಿತ ಒಂದು ಮಾರ್ಗದರ್ಶಿ ಪುಸ್ತಕ ಮತ್ತು ಒಂದು ಬಂದೂಕಷ್ಟೇ ಆತನ ಒಂಟಿ ಸಂಸಾರಕ್ಕೆ ಪ್ರವೇಶ ಪಡೆದ ಅಮೂಲ್ಯ ವಸ್ತುಗಳಾಗಿರುತ್ತವೆ. ಕಣ್ಣಿಗೆ ಕಂಡ ಹಕ್ಕುಗಳನ್ನೂ ಸಣ್ಣಪುಟ್ಟ ಪ್ರಾಣಿಗಳನ್ನೂ ಬಂದೂಕಿನಿಂದ ಕೊಂದು ತನ್ನ ಆಹಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುವ ಮೆಕಾಂಡ್ಲೆಸ್ ಒಮ್ಮೆ ಹಿಮಗಾಡಿನಲ್ಲಿ ಸಾಮಾನ್ಯವಾಗಿರುವ ಭಾರೀಗಾತ್ರದ ಹಿಮಗಡವೆಯೊಂದನ್ನು ಹೊಡೆದುರುಳಿಸುತ್ತಾನೆ, ಆದರೆ ಅದರ ಮಾಂಸವನ್ನು ಮುಂದಿನ ದಿನಕ್ಕಾಗಿ ಕಾಪಿಡಲು ಯತ್ನಿಸಿ ಸೋಲುವ ಆತ ಇಲ್ಲಿಯೂ ತನಗೆ ನಾಳೆಯ ಆಸೆಗಳೇಕೆ ಹುಟ್ಟುತ್ತಿವೆ ಎಂದು ಅಚ್ಚರಿಗೀಡಾಗುತ್ತಾನೆ.
ಮನುಷ್ಯ ನಿರ್ಮಿತ ಸಮಾಜ ಮತ್ತು ಸಮಾಜದೊಳಗಿನ ಇಂತಿಷ್ಟೇ ಎಂದು ಗಡಿಗಳನ್ನು ಹೇರುವ ವ್ಯವಸ್ಥೆಯ ವಿರುದ್ದ ಅನಾರ್ಕೋ ಪ್ರಿಮಿಟಿವಿಸಂ ಬಗೆಯ ಧೋರಣೆಯ ಮೂಲಕ ತನ್ನದೇ ಬದುಕುವಿಕೆಯನ್ನು ಕಟ್ಟಹೊರಟು ಕೊನೆಗೆ ಯಾವುದನ್ನು ಹುಡುಕುತ್ತ ಹೊರಟನೋ ಅದರಿಂದಲೇ ಕೊಲೆಯಾದ ಮೆಕಾಂಡ್ಲೆಸನ ಅನುಭವ ಗಾಥೆಗಳನ್ನು ಆಧರಿಸಿದ ಇನ್ ಟು ದಿ ವೈಲ್ಡ್ ಸಿನಿಮಾವನ್ನು ನಿರ್ದೇಶಿಸಿದ್ದು ಖ್ಯಾತ ನಟ ಸೀನ್ಪೆನ್. ಎರಡನೆಯ ಮಹಾಯುದ್ಧದ ಕಾಲಘಟ್ಟದಲ್ಲಿ ಸೈನಿಕರಾಗಿ ಬೇರೆ ಬೇರೆ ದೇಶಗಳ ಸೈನಿಕರನ್ನು ತಮ್ಮದಲ್ಲದ ಕಾರಣಗಳಿಗಾಗಿ ಕೊಂದುಹಾಕಿದ ಪಾಪಪ್ರಜ್ಞೆಯೊಳಗೆ ಹುಟ್ಟಿದ ವಿಶಿಷ್ಟ ರೀತಿಯ ಬದುಕುವಿಕೆಯೊಳಗೆ ಜಾರಿಕೊಂಡ ಹಿಪ್ಪಿಗಳಿಗೂ, ಸಮಾಜ ಮತ್ತದರ ನಾಜೂಕಿನ ಪೊರೆ ಹೊತ್ತ ಕ್ರೂರ ಮನಸ್ಥಿತಿಗಳ ವಿರುದ್ಧ ಪರ್ಯಾಯ ಬದುಕುವಿಕೆ ಶೈಲಿಯಲ್ಲಿಯೇ ಬಂಡೆದ್ದ ಮೆಕಾಂಡ್ಲೆಸನ ದುರಂತ ಸಾವಿಗೂ ಸಾಮ್ಯತೆಗಳಿವೆ. ಕಟ್ಟಿದ್ದನ್ನೇ ಬದುಕು, ಗೋಡೆಗಳನ್ನು ದಾಟದಿರು, ಆಲೋಚನೆಯೂ ಸೇರಿದಂತೆ ಎಲ್ಲವಕ್ಕೂ ಮಿತಿಯ ಗೆರೆಯನ್ನೆಳೆದುಕೊಂಡು ಬದುಕು ಎಂಬ ಶಾಸನಗಳನ್ನು ಹೊರಡಿಸುವ ಸಮಾಜ ಮತ್ತು ಅದರ ಹಿಂದಿನ ಶಕ್ತಿಗಳ ವಿರುದ್ಧ ಎಲ್ಲರೊಳಗೂ ಒಂದು ಅಸಮಾಧಾನದ ಹೊಗೆ ಆಡುತ್ತಲೇ ಇರುತ್ತದೆ. ಆದರೆ ಆ ಹೊಗೆಯನ್ನೂದಿ ಬೆಂಕಿ ಮಾಡಿ ಆ ಬೆಂಕಿಯಲ್ಲಿ ನಿರ್ಬಂಧಗಳೆಲ್ಲವನ್ನೂ ಸುಟ್ಟು ಹೊಸತಾದ ಸ್ವಚ್ಛಬೂದಿಯನ್ನು ಸೃಜಿಸುವ ಮನಸ್ಥಿತಿಗೆ ನಾವ್ಯಾರೂ ತಲೆಕೊಡಲು ಹೋಗುವುದಿಲ್ಲ. ಇಡೀ ಇನ್ ಟು ದಿ ವೈಲ್ಡ್ ಚಿತ್ರವು ಮೆಕಾಂಡ್ಲೆಸನ ಹೊಸತರ ಹುಡುಕಾಟ ಮತ್ತು ಅಸ್ತಿತ್ವದಲ್ಲಿರುವ ಮತ್ತು ಕೈಗಳಿಗೆ ಹಗ್ಗ ಬಿಗಿಯುವ ಆಧುನಿಕ ಭೌತಿಕತೆ ಮತ್ತು ಕನ್ಸ್ಯೂಮರಿಸಂ ಆಧರಿಸಿದ ಶಿಸ್ತಿನ ಬದುಕನ್ನು ತಿರಸ್ಕರಿಸುವ ಆತನ ಅಸಹನೆಯನ್ನು ಕಟ್ಟಿಕೊಡುವ ಅಪರೂಪದ ಚಿತ್ರ.
ಈಗ ಗೆಳೆಯನ ವಿಷಯಕ್ಕೆ ಬರೋಣ. ಕಾಲಿಗೆ ಟೈರು ಕಟ್ಟಿಕೊಂಡು ಇಳಿಜಾರು ಕಂಡ ಕಡೆಯೆಲ್ಲ ಜಾರಲಿಕ್ಕೆ ಹೊರಟಿರುವ ಗೆಳೆಯನ ಹೊಸತನದ ಹುಡುಕುವಿಕೆಗೆ ಮತ್ತು ಅನೂಹ್ಯತೆಗಳನ್ನು ತನ್ನನುಭವದ ಕುಡಿಕೆಕೊಳಗೆ ಬಸಿದುಕೊಳ್ಳಲು ಇರುವುದೆಲ್ಲವನ್ನೂ ಬಿಟ್ಟು ಹೊರಟಿರುವ ಗೆಳೆಯನಿಗೆ ಅಲೆಮಾರಿ ಮೆಕಾಂಡ್ಲೆಸನ ಮನಸ್ಥಿತಿ ವರ್ಗಾವಣೆಗೊಂಡಿರಬಹುದೇ? ಇದು ಇಷ್ಟೇ ಎಂದು ಹೇಳಿ ಕೊಟ್ಟಿರುವ ಜಗತ್ತಿನಲ್ಲಿ ನಾವುಗಳು ಕೈಕಾಲು ನಾಲಿಗೆ ತುಟಿ ಎದೆ ಮನಸ್ಸುಗಳೆಲ್ಲವನ್ನೂ ಬಿಗಿಯಾಗಿ ಕಟ್ಟಿಹಾಕಿಕೊಂಡು ಕುಳಿತಿರುವಾಗ ಈ ಗೆಳೆಯನೊಬ್ಬನಾದರೂ ಅದರಿಂದ ಬಚಾವಾಗಿ ಒಂದಷ್ಟು ದಿನ ಬದುಕಿಕೊಂಡು ಬರುವುದಾದರೆ ಯಾರಿಗೇನೂ ನಷ್ಟವಿಲ್ಲವಲ್ಲ. ಗೆಳೆಯನ ಟೈರು ಕಟ್ಟಿಕೊಂಡ ಕಾಲಿನೆದುರು ಏರುದಿಬ್ಬಗಳು ಎದುರಾಗದಿರಲಿ, ಬೆತ್ತಲೆಹೆಜ್ಜೆಗಳ ಯಾನದ ಯಾವತ್ತಾದರೊಂದು ದಿನ ಮೈಮುರಿದು ಎದ್ದು ನಿಂತ ಹಸಿವಿನ ಸಮಯದಲ್ಲಿ ಅವನಿಗೆ ಹತ್ತಿರದಲ್ಲೆಲ್ಲೂ ಹೆಡಿಸಾರಂ ಮೆಕೆಂಝೀ ಜಾತಿಯ ಮರದ ಕಾಯಿಗಳ್ಯಾವುವೂ ಸಿಗದಿರಲಿ.



ಊರುಬಿಡಲು ಸಿದ್ಧನಾಗಿ ಏರ್ ಪೋರ್ಟಿಗೆ ಬಂದರೆ ನಾನು ತೆರಳಬೇಕಿರುವ ನಗರವನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಮಾನಗಳೂ ಕಾರ್ಯಾಚರಿಸುತ್ತಿವೆ. ಬದಲಿ ವಿಮಾನವನ್ನು ಆಯ್ಕೆ ಮಾಡಿಕೊಂಡ ತಕ್ಷಣ ಆ ವಿಮಾನಯಾನವೂ ರದ್ದುಗೊಂಡಿದೆಯೆಂದು ಸಿಬ್ಬಂದಿಗಳು ಭಯಮಿಶ್ರಿತ ದನಿಯಲ್ಲಿ ಹೇಳುತ್ತಿದ್ದಾರೆ. ಬಸ್ಸಿನಲ್ಲಾದರೂ ಈ ಊರು ಬಿಟ್ಟು ಓಡಿಹೋಗೋಣವೆಂದರೆ ಬಸ್ಸುಗಳೆಲ್ಲವೂ ಸ್ಥಗಿತಗೊಂಡಿವೆ. ನಾನು ಹತ್ತಬೇಕಿರುವ ಬಸ್ಸುಗಳು ಮಾತ್ರ ಸ್ಥಗಿತಗೊಳ್ಳುತ್ತಿರುವುದೇಕೆ? ಹಾಳಾಗಲಿ ನನ್ನ ಕಾರಿನಲ್ಲೇ ಈ ಹಾಳೂರನ್ನು ಬಿಟ್ಟು ತೊಗುತ್ತೇನೆ.. ಇದೇನಿದು ನಾನು ಹೋಗಬೇಕಿರುವ ರಸ್ತೆಗಳಲ್ಲೇ ಅಪಘಾತಗಳಾಗಿ ರಸ್ತೆಗಳು ನಿರ್ಬಂಧನೆಗೊಳಗಾಗಿವೆ. ನನ್ನ ಕಾರು ತೆಗೆದುಕೊಂಡ ತಿರುವುಗಳಲ್ಲೇ ಟ್ರಾಫಿಕ್ ಜಾಮುಗಳಾಗುತ್ತಿವೆ. ಏನಾಗುತ್ತಿದೆ ಈ ಊರಲ್ಲಿ? ಏನಾಗುತ್ತಿದೆ ನನ್ನ ಬದುಕಿನೊಳಗೆ? ಎಲ್ಲವೂ ಗೋಜಲು ಗೋಜಲಾಗುತ್ತಿರುವ ಸಮಯದಲ್ಲಿ ನಾನು ಚಿಕ್ಕಂದಿನಲ್ಲೇ ಸತ್ತು ಹೋಗಿದ್ದಾನೆ ಎಂದು ನಂಬಿಕೊಂಡಿದ್ದ ನನ್ನ ಅಪ್ಪ ಇದ್ದಕ್ಕಿದ್ದಂತೆ ನನ್ನೆದುರು ಬಂದಿದ್ದಾನೆ. ನನ್ನಪ್ಪನ ವಿವರಗಳು ನನಗೆ ಗೊತ್ತಿರುವಷ್ಟೂ ಈ ವ್ಯಕ್ತಿಗೆ ತಿಳಿದಿಲ್ಲ.. ಬಂದಷ್ಟೇ ವೇಗದಲ್ಲಿ ಈತನೂ ಮಾಯವಾಗಿದ್ದಾನೆ. ಏನಾಗುತ್ತಿದೆ ನನ್ನ ಸುತ್ತ?
ರೇಡಿಯೋ ಬಂದ್ ಆಗುತ್ತದೆ.. ಕಳೆದ ೩೦ ವರ್ಷಗಳಲ್ಲಿ ನಾನು ಬದುಕಿದ್ದು ರಿಯಾಲಿಟಿ ಶೋ ಒಂದರ ಸೆಟ್ ಒಳಗಾ?.. ಎಲ್ಲವೂ ಸುಳ್ಳೇ? ನಾನಾದರೂ ಸತ್ಯವೋ ಅಥವಾ ನಾನೂ ಒಂದು ಸುಳ್ಳೋ? ಆಕಾಶದ ಗೋಡೆಗೆ ಕಟ್ಟಿಕೊಂಡ ಮೆಟ್ಟಿಲುಗಳನ್ನೇರಿ ನನ್ನದಲ್ಲದ ನನಗಾಗಿಯೇ ನಿರ್ಮಿತಗೊಂಡ ಮಿಥ್ಯಾಜಗತ್ತಿನ ಹೊರಗೆ ಹೋಗುತ್ತಿದ್ದೇನೆ.. ಅಲ್ಲಿ ಏನೇನೋ ಹೊಸ ಹೊಸದಾಗಿ ಕಾಣುತ್ತಿವೆ.. ಅವು ನನಗೇನೂ ಅರ್ಥವಾಗುತ್ತಿಲ್ಲ. 


ಕೆಲಸದ ನಡುವೆಯೇ ಟೆಹರಾನಿನ ಕಟ್ಟಡ ನಿರ್ಮಾಣ ನಡೆಯುತ್ತಿರುವ ಸ್ಥಳಗಳಲ್ಲಿ, ಬೇಡವೆಂದು ಉಳ್ಳವರು ಬಿಸಾಡಿದ ನಿರುಪಯುಕ್ತ ವಸ್ತುಗಳನ್ನು ಮಾಲೀಕರ ಒಪ್ಪಿಗೆಯ ಮೇರೆಗೆ ದಿನವೂ ಒಂದೊಂದು ವಸ್ತುವನ್ನು ಕರೀಮನು ತನ್ನೂರಿಗೆ ಬೈಕಿನಲ್ಲಿ ಕಟ್ಟಿಕೊಂಡು ಬರುತ್ತಾನೆ, ತಾನು ದುಡ್ಡು ಕೊಟ್ಟು ಖರೀದಿಸಲು ಆಗದೇ ಇದ್ದ, ಟಿವಿ ಆಂಟೆನಾ, ಮುರಿದ ಕಿಟಕಿಗಳು, ಬಿರುಕುಬಿದ್ದ ಬಾಗಿಲುಗಳು ಹೀಗೆ ದಿನವೂ ಒಂದೊಂದನ್ನು ತನ್ನ ಮನೆಗೆ ಕೊಂಡೊಯ್ದು ಪೇರಿಸಿಡುತ್ತಿದ್ದಾನೆ, ಕೂಡಿಟ್ಟ ನಿರುಪಯುಕ್ತ ವಸ್ತುಗಳ ಗುಡ್ಡೆಯೇ ಕರೀಮನ ಮನೆಯ ಮುಂದೆ ಕಾಲುಕತ್ತರಿಸಿ ಬಿದ್ದಿದೆ. ದಿನಕಳೆದಂತೆ ಆ ತ್ಯಾಜ್ಯಗಳ ಗುಡ್ಡೆಯ ಮೇಲೆಯೇ ಮೋಹವುಕ್ಕಿಸಿಕೊಳ್ಳುವ ಕರೀಮನು ಅವನ್ನು ಕೇಳಿಕೊಂಡು ಬಂದ ಊರವರಿಗೂ ನಿರಾಕರಿಸುತ್ತ ತನ್ನ ತ್ಯಾಜ್ಯದೆಡೆಗಿನ ಮೋಹದೊಳಗೇ ಕಟ್ಟಿಹಾಕಲ್ಪಟ್ಟಿದ್ದಾನೆ. ಪಕ್ಕದ ಮನೆಯಾಕೆಗೆ ಆ ತ್ಯಾಜ್ಯದ ಗುಡ್ಡೆಯಿಂದ ಒಂದು ಮುರುಕಲು ನೀಲಿ ಬಾಗಿಲು ಕೊಟ್ಟಿದ್ದ ಹೆಂಡತಿಯ ಮೇಲೆ ಸಿಡಿಮಿಡಿಗೊಳ್ಳುವ ಕರೀಮನು, ಪಕ್ಕದ ಮನೆಯಿಂದ ಆ ನೀಲಿ ಬಾಗಿಲನ್ನು ಹೊತ್ತು ವಾಪಸ್ಸು ತರುವಾಗ ಆಯತಪ್ಪಿಬಿದ್ದು ಕಾಲು ಮುರಿದುಕೊಳ್ಳುತ್ತಾನೆ. ಆ ಸಮಯದಲ್ಲಿ ಊರವರು ಮತ್ತು ನೆರೆಹೊರೆಯವರು ಮತ್ತು ಮನೆಯವರ ಪ್ರೀತಿಯನ್ನು ಅನಾಯಾಸವಾಗಿ ದಕ್ಕಿಸಿಕೊಂಡಿರುವ ಕರೀಮನಿಗೆ ತನ್ನ ತ್ಯಾಜ್ಯದ ಗುಡ್ಡೆಯ ನಿರ್ಜೀವ ಮುರಿದ ವಸ್ತುಗಳಿಗಿಂತ ಮನುಷ್ಯ ಮನುಷ್ಯರ ನಡುವಿನ ಬಂಧನವೇ ಆಪ್ತವಾಗಿ ಕಾಡುತ್ತದೆ. 
ಚಿತ್ರದ ನಾಯಕ ಕರೀಮನ ಪಾತ್ರದಲ್ಲಿ ಕುತ್ತಿಗೆ ಮಟ್ಟಕ್ಕೆ ಹೂತು ಹೋಗಿರುವ “ರೆಜಾ ನಾಝಿ”ಯ ಬಗ್ಗೆ ಏನು ಪದಜೋಡಿಸಿ ಬರೆದರೂ ಕಡಿಮೆಯೇ. ನಿಯತ್ತಿನ ದುಡಿಮೆ, ಅನಾಯಾಸವಾಗಿ ದಕ್ಕುವ ತ್ಯಾಜ್ಯವಸ್ತುಗಳು, ಕಿವುಡು ಮಹಳ ಶ್ರವಣ ಸಾಧನಕ್ಕೆ ಆತ ಬೀಳುವ ಪಾಡು, ಎಲ್ಲದರಲ್ಲಿಯೂ ರೆಜಾನಾಝೀ ಸಂಪೂರ್ಣವಾಗಿ ತನ್ಮಯನಾಗಿ ಹೋಗಿದ್ದಾರೆ. ಹೊರಲಾರದ ಭಾರವಾದರೂ, ನೀಲಿಬಾಗಿಲನ್ನು ಹೊತ್ತು ಬಟಾಬಯಲು ಗದ್ದೆಯಲ್ಲಿ ಉಸಿರುಬಿಡುತ್ತ ಸಾಗುವಾಗಿನ ರೆಜಾನ ಅಭಿನಯ.. ಬಿಗಿದಪ್ಪಿಕೊಳ್ಳಬೇಕೆನಿಸುವಷ್ಟು ಅದ್ಭುತವಾಗಿದೆ. ಇರಾನಿನಲ್ಲಿದ್ದೂ ಅಲ್ಲಿನ ಕರ್ಮಠರು ಮತ್ತು ವ್ಯವಸ್ಥೆಯ ತಿಕ್ಕಾಟಗಳಿಗೆ ಹಿಂದೆ ಬಿದ್ದ ಸಣ್ಣಪುಟ್ಟ ಹಳ್ಳಿಗಳ, ಊರುಗಳ ಜನರ ಬದುಕುವ ಪಡಿಪಾಟಲನ್ನು ಮಕ್ಕಳನ್ನು ಬಳಸಿ ಕಥನರೂಪದಲ್ಲಿ ಕಟ್ಟುವ ಮಜೀದಿಯ ಪ್ರಯತ್ನಗಳು “ಸಾಂಗ್ ಆಫ್ ಸ್ಪಾರೋಸ್” ಎಂಬ ಪರ್ಷಿಯನ್ ಚಿತ್ರದಲ್ಲಿ ದಿವೀನಾಗಿ ಮುನ್ನುಗ್ಗಿವೆ. 

ಶಿಕ್ಷಕ ಗಾವೋಗೆ ನೀಡಿದ ವಾಗ್ದಾನದಂತೆ ಇರುವ 28 ಮಕ್ಕಳಲ್ಲಿ ಯಾರೂ ಶಾಲೆ ಬಿಡದಂತೆ ನೋಡಿಕೊಳ್ಳುವುದು ಮಿಂಝಿಯ ಕರ್ತವ್ಯವಾದ್ದರಿಂದ ತನಗೆ ಶಿಕ್ಷಕ ಗಾವೋರಿಂದ ಬರಬೇಕಾದ ಹಣಕ್ಕೆ ಕುತ್ತುಂಟಾಗುತ್ತದೆ ಎಂದು ಬಗೆದ ಮಿಂಝಿ ಚಿಂತೆಗೆ ಬೀಳುತ್ತಾಳೆ. ಏನಾದರೂ ಸರಿಯೇ ಝಾಂಗ್ ತೆರಳಿರುವ ಝಂಗ್ಜಾಕೋ ಪಟ್ಟಣಕ್ಕೆ ತೆರಳಿ ಆತನನ್ನು ಕರೆತರಲೇಬೇಕೆಂದು ನಿಶ್ಚಯಿಸುವ ಮಿಂಝಿಯ ಬಳಿ ಆ ನಗರಕ್ಕೆ ತೆರಳುವಷ್ಟು ಬಸ್ಚಾಚಾರ್ಜಿನ ಹಣವೂ ಇರುವುದಿಲ್ಲ. ಶಾಲೆಯ ಮಕ್ಕಳ ಬಳಿರುವ ಚಿಲ್ಲರೆ ಕಾಸೆಲ್ಲವನ್ನೂ ಒಟ್ಟುಗೂಡಿಸಿದರೂ ಬಸ್ಚಾರ್ಜಿಗೆ ಹಣ ದೊರಕುವುದಿಲ್ಲ. ಕೊನೆಗೆ ಮಕ್ಕಳೆಲ್ಲರನ್ನೂ ಕರೆದುಕೊಂಡು ಇಟ್ಟಿಗೆ ಸುಡುವ ಭಟ್ಟಿಯೊಳಗೆ ಕೂಲಿಗೆ ಹೋಗುವ ಮಿಂಝಿ ಅಲ್ಲಿ ದಿನಪೂರ್ತಿ ಮಕ್ಕಳೊಟ್ಟಿಗೆ ಕೂಲಿ ಮಾಡಿ ಒಂದಷ್ಟು ಹಣ ಸಂಪಾದಿಸುತ್ತಾಳೆ. ಆ ಹಣವೂ ಸಾಲದಾದಾಗ ಮಕ್ಕಳು ಶಿಖುವಾನ್ ಹಳ್ಳಿಯಿಂದ ಝಂಗ್ಜಾಕೋ ಪಟ್ಟಣಕ್ಕೆ ಖಾಸಗಿ ಟೆಂಪೋ ಒಂದು ತೆರಳುವುದಾಗಿಯೂ.. ಮಿಂಝಿ ಆ ಟೆಂಪೋದ ಸೀಟಿನ ಕೆಳಗೆ ಅವಿತುಕೊಂಡು ಪಟ್ಟಣ ತಲುಪಬಹುದಾಗಿಯೂ ಉಪಾಯ ಕೊಡುತ್ತಾರೆ. ಅದರಂತೆಯೇ ಸೀಟಿನ ಕೆಳಗೆ ಅವಿತು ಕುಳಿತ ಮಿಂಝಿಯನ್ನು ಟೆಂಪೋದವನು ಎಳೆದು ನಡುದಾರಿಯಲ್ಲಿ ರಸ್ತೆಗೆ ನೂಕುತ್ತಾನೆ. ಅಲ್ಲಿಂದ ಕಿಲೋಮೀಟರುಗಟ್ಟಲೆ ಬೆಟ್ಟಗುಡ್ಡಗಳನ್ನು ಹತ್ತಿ ಇಳಿದು ಕಡೆಗೆ ಮಿಂಝಿ ಝಂಗ್ಜಾಕೋ ಪಟ್ಟಣವನ್ನು ಸೇರುತ್ತಾಳೆ. ಬಾಲಕ ಝಾಂಗ್ ಕೆಲಸಕ್ಕೆಂದು ಬಂದ ಮನೆಯಲ್ಲಿನ ಕೆಲಸದಾಕೆಯನ್ನು ವಿಚಾರಿಸಿದಾಗ ಆತ ರೈಲ್ವೇ ಸ್ಟೇಷನ್ನಲ್ಲಿ ತಪ್ಪಿಸಿಕೊಂಡಿರುತ್ತಾನೆ. ಕೆಲಸದಾಕೆ ಸೂನ್ಜಿಮಿಯನ್ನು ಝಾಂಗ್ನನ್ನು ಹುಡುಕಿಕೊಡಲು ಕೇಳುವ ಮಿಂಝಿ ಆಕೆಯಿಂದ ನಿರಾಕರಣೆಗೆ ಒಳಗಾಗುತ್ತಾಳೆ. ಝಾಂಗ್ ಕಳೆದುಹೋದ ರೈಲ್ವೇಸ್ಟೇಷನ್ಗೆ ತೆರಳುವ ಮಿಂಝಿ ಝಾಂಗ್ಗಾಗಿ ಅಲ್ಲೆಲ್ಲ ಹುಡುಕಿ ಸೋತು ಕೊನೆಗೆ ರೈಲ್ವೇ ಸ್ಟೇಷನ್ನ ಅನೌನ್ಸರ್ ಬಳಿ ಪ್ರಕಟಣೆ ನೀಡುವಂತೆ ಬೇಡಿಕೊಳ್ಳುತ್ತಾಳೆ. ಸಂಜೆಯವರೆಗೂ ಅನೌನ್ಸರ್ ಮೈಕ್ ಮೂಲಕ ಪ್ರಕಟಣೆ ಹೊರಡಿಸಿದರೂ ಝಾಂಗ್ನ ಸುಳಿವು ಸಿಗುವುದಿಲ್ಲ. ಪ್ರಯತ್ನ ಬಿಡದ ಮಿಂಝಿ ಸ್ಟೇಷನರಿ ಅಂಗಡಿಯೊಂದಕ್ಕೆ ತೆರಳಿ ಒಂದಷ್ಟು ಹಾಳೆಯನ್ನೂ ಬಣ್ಣದ ಪೆನ್ನನ್ನೂ ತಂದು ಝಾಂಗ್ನನ್ನು ಹುಡುಕುತ್ತ ಮಿಂಝಿ ಬಂದಿರುವುದಾಗಿಯೂ, ಇದನ್ನು ನೋಡಿದರೆ ರೈಲ್ವೇಸ್ಟೇಷನ್ ಬಳಿ ಬರಬೇಕೆಂದೂ ಬರೆದು ಅದನ್ನು ಸ್ಟೇಷನ್ನ ಹೊರಭಾಗದ ಅಲ್ಲಲ್ಲಿ ಅಂಟಿಸುತ್ತಾಳೆ. ರಾತ್ರಿಯಾದಾಗ ಬೀದಿಪಕ್ಕದ ಲೈಟುಕಂಬವೊಂದರ ಬಳಿ ಹಾಳೆಗಳನ್ನಿಟ್ಟುಕೊಂಡು ಅಲ್ಲೇ ಮಲಗುತ್ತಾಳೆ. ಬೆಳಗಿನ ಜಾವ ಸ್ವಚ್ಛತಾ ಸಿಬ್ಬಂದಿಯವರು ಆ ಹಾಳೆಗಳನ್ನೂ ಕಸದ ಜೊತೆಗೆ ಗುಡಿಸಿಕೊಂಡು ಹೋಗುತ್ತಾರೆ. ಮುಂದೇನು ಮಾಡಬೇಕೆಂದು ತೋಚದೆ ರೈಲ್ವೇ ಸ್ಟೇಷನ್ನ ಒಳಗೆ ಬಂದು ಕೂರುವ ಮಿಂಝಿಯ ಕಥೆ ಕೇಳುವ ಒಬ್ಬಾತ ಝಾಂಗ್ ಕಳೆದುಹೋಗಿರುವ ಬಗ್ಗೆ ಟಿವಿ ಚಾನೆಲ್ ಒಂದಕ್ಕೆ ಜಾಹಿರಾತು ಕೊಡುವುದು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾನೆ. ಅದನ್ನು ನಂಬಿ ಅಲ್ಲಿಂದ ಟಿವಿ ಚಾನೆಲ್ ಒಂದಕ್ಕೆ ಬಂದು ಅಲ್ಲಿನ ಜಾಹಿರಾತು ವ್ಯವಸ್ಥಾಪಕರೊಡನೆ ಝಾಂಗ್ ಕಳೆದುಹೋಗಿರುವ ಬಗ್ಗೆ ಜಾಹಿರಾತು ಪ್ರಸಾರ ಮಾಡಲು ಕೇಳಿಕೊಳ್ಳುತ್ತಾಳೆ. ಸೆಕೆಂಡಿಗೆ ಇಷ್ಟು, ಟೈಮ್ವಾರು ಇಷ್ಟು ಹಣವೆಂದು ಜಾಹಿರಾತು ಶುಲ್ಕವನ್ನು ಕೇಳುವ ಟಿವಿ ಚಾನೆಲ್ನವರ ಎದುರು ಮಿಂಝಿ ಮೂಕಳಾಗುತ್ತಾಳೆ. ಆಕೆಯನ್ನು ಚಾನೆಲ್ ಕಚೇರಿಯ ಹೊರಗೆ ದಬ್ಬಲಾಗುತ್ತದೆ. ಆದರೂ ಹಠ ಬಿಡದ ಮಿಂಝಿ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಬಳಿ ತನ್ನ ಉದ್ದೇಶವನ್ನು ತೋಡಿಕೊಳ್ಳುತ್ತಾಳೆ. ಕಣ್ಣಿಗೆ ಕನ್ನಡಕ ಧರಿಸಿರುವ ಟಿವಿವಾಹಿನಿಯ ಸುದ್ದಿ ವ್ಯವಸ್ಥಾಪಕರು ಒಬ್ಬರಿದ್ದು ಅವರು ಮಾತ್ರ ನಿನಗೆ ಸಹಾಯ ಮಾಡಬಲ್ಲರು, ಅವರು ಹೊರಗೆ ಬಂದಾಗ ಅವರನ್ನು ವಿನಂತಿಸುವಂತೆ ಸೆಕ್ಯೂರಿಟಿಯವನು ತಿಳಿಸಿದ್ದನ್ನು ನಂಬುವ ಮುಗ್ಧೆ ಮಿಂಝಿ.. ಕಚೇರಿಯಿಂದ ಹೊರಬರುವ ತಂಪುಕನ್ನಡಕ ಧರಿಸಿದ ಪ್ರತಿಯೊಬ್ಬರನ್ನೂ ನೀವು ಸುದ್ದಿ ವ್ಯವಸ್ಥಾಪಕರೇ ಎಂದು ಕೇಳುತ್ತ ಅವರಿಂದ ಇಲ್ಲವೆಂದು ಅನ್ನಿಸಿಕೊಂಡು ಗೇಟಿನ ಬಳಿಯೇ ನಿಂತಿರುತ್ತಾಳೆ. ಕಚೇರಿಯ ಮೇಲುಗಡೆಯಿಂದ ಅಚಾನಕ್ಕಾಗಿ ಮಿಂಝಿಯನ್ನು ನೋಡುವ ವ್ಯವಸ್ಥಾಪಕನು ಆಕೆಯನ್ನು ಕಚೇರಿಯೊಳಗೆ ಕರೆಸಿಕೊಂಡು ಆಕೆಯ ಹಿನ್ನೆಲೆಯನ್ನು ಅರಿತುಕೊಳ್ಳುತ್ತಾನೆ.
ಗ್ರಾಮೀಣ ಚೈನಾದ ಬಡತನವನ್ನು ಎಳೆಎಳೆಯಾಗಿ ಜಾಗತಿಕ ಮಟ್ಟದಲ್ಲಿ ದೃಶ್ಯರೂಪದಲ್ಲಿ ಬಿಚ್ಚಿಟ್ಟ ನಿರ್ದೇಶಕ ಇಮೂಝಾಂಗ್ ಈ ಚಿತ್ರಕ್ಕಾಗಿ ಕಣ್ಣಿಗೆ ಕಂಡ ಹಳ್ಳಿಗರನ್ನೇ ಆರಿಸಿ ಅವರಿಂದ ನಟನೆಯನ್ನು ಬಸಿದಿರುವುದು ಚಪ್ಪಾಳೆ ತಟ್ಟಲೇಬೇಕಾದ ಪ್ರಯತ್ನ. ಯಾವ ಸೀಸನ್ಡ್ ಕಲಾವಿದರಿಗೂ ಒಂದಿಂಚೂ ಕಮ್ಮಿಯಿಲ್ಲದಂತೆ ನಟಿಸಿರುವ ಈ ಹಳ್ಳಿಗರು ಗ್ರಾಮಗಳನ್ನು ನಿರ್ಲಕ್ಷಿಸಿದ ಚೈನಾ ಸರ್ಕಾರದ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದರು. ಇಡೀ ಜಗತ್ತಿಗೆ ತಂತ್ರಜ್ಞಾನ ಮತ್ತು ಬೆಳವಣಿಗೆಯಲ್ಲಿ ಚೈನಿಗರು ಮುಂದೆಂಬ ಕೋಡನ್ನು ಮುಂದು ಮಾಡುವ ಚೈನಾ ಸರ್ಕಾರವು, ತನ್ನ ದೇಶದಲ್ಲಿ ಪ್ರತೀ ವರ್ಷ ಒಂದು ಮಿಲಿಯನ್ ಗ್ರಾಮೀಣಮಕ್ಕಳು ಶಾಲೆತೊರೆದು ಕೂಲಿಗೆ ಹೋಗುತ್ತಿರುವುದನ್ನೇಕೆ ಮುಚ್ಚಿಟ್ಟಿದೆ ಎಂದು ಪ್ರಶ್ನಿಸಿದ ನಿರ್ದೇಶಕ ಇಮೂಝಾಂಗ್ ಈ ಚಿತ್ರದ ಮೂಲಕ ಸೋಷಿಯಲ್ ಆಕ್ಟಿವಿಸಂ ಅನ್ನು ಮೀಡಿಯಾ ಮೂಲಕವೂ ಮಾಡಬಹುದು ಎಂಬುದನ್ನು ದೊಡ್ಡಮಟ್ಟದಲ್ಲಿ ನಿರೂಪಿಸಿದರು. ತೆರೆಕಂಡ ನಂತರ 40 ಮಿಲಿಯನ್ನಷ್ಟು ಚೈನಾವೊಂದರಿಂದಲೇ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿದ್ದು ಇಂತಹದೇ ಹರವಿನ ಇತರೆ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವಂತಹ ಪ್ರಯತ್ನ ಚೈನಾದಲ್ಲಿ ಪ್ರಾರಂಭವಾಗಲು ನೆರವಾಗಿದ್ದು ನಾಟ್ ಒನ್ ಲೆಸ್ ಚಿತ್ರದ ಹೆಗ್ಗಳಿಕೆ. ಸಿಕ್ಕರೆ ಒಮ್ಮೆ ಈ ಸಿನಿಮಾ ನೋಡಿ. ಮಿಂಝಿ ಟಿವಿ ಸ್ಟುಡಿಯೋದಲ್ಲಿ ಮಾತನಾಡುವ ದೃಶ್ಯ ನೋಡುವಾಗ ಕಡ್ಡಾಯವಾಗಿ ಕರ್ಚೀಫು ಹತ್ತಿರದಲ್ಲಿಟ್ಟುಕೊಳ್ಳಿ.