Wednesday 22 February 2012

ಹಸಿವೆಂಬೋ ಮೂರಕ್ಷರದ ಕಾನೂನಿನ ಬಗ್ಗೆ..

ಜಗತ್ತಿನ ಮೊಟ್ಟ ಮೊದಲ ಕಾನೂನು ಮೂರಕ್ಷರದಿಂದ ಶುರುವಿಟ್ಟು
ಮೂರಕ್ಷರದಲ್ಲೇ ಕೊನೆಯಾಗುವುದು ಒಂದೆಡೆಯಲ್ಲಿ ಮಾತ್ರವು..
ಎಡೆಯ ಹೆಸರಿಂತಿರ್ಪುದು ತಿಪ್ಪಾಳೆಯಾಡುವ ಭೂ ನ್ಯಾಯಾಲಯ.

ವ್ಯೋಮಾಕಾಶದ ಜೀವಸಂಕುಲಗಳಿಗೆ ಅನ್ನವುಣಿಸುವವೆಂದು
ಯಾರೋ ಬರೆದಿಟ್ಟು ಹೋದ ತಾಳೆಗರಿಯನ್ನು ಕಂಡು
ಕಾಲರುದ್ರನ ಕೈಯೊಳಗಿನ ಖಾಲಿ ಕಾಪಾಲವು ನಗುತ್ತಿದೆ.

ಬೆಲೂನು ಮಾರುವ ಹುಡುಗನ ಅಂಗೈಯಲ್ಲಿ ತಣ್ಣಗಾಗುತ್ತಿರುವ
ಚಹಾದ ಗಳಾಸಿನ ಪಾತಾಳದಾಳದಲಿ.. ಕವುಚಿ ಬಿದ್ದಿದ್ದ
ಹಸಿವೆಂಬ ಮೂರಕ್ಷರವು ತನ್ನೊಡನೆ ತಾನೇ ಪ್ರೇಮಕ್ಕೆ ಬಿದ್ದಿತ್ತು.

ನನ್ನವ್ವ.. ಖಂಡವೊಂದರ ನಕ್ಷೆಯಂತೆ ದಿಕ್ಕಾಪಾಲಾಗಿ ಬೇಯಿಸಿದ್ದ
ರೊಟ್ಟಿಯ ನಟ್ಟನಡುವಿನಲ್ಲಿ ಮೂರಕ್ಷರವನ್ನು ಚಿತ್ರಿಸಿದ ರೂಹಿಲ್ಲದ
ಜಂಗಮನ ಪಾದಕ್ಕೆ ನನ್ನ ತಲೆಯನ್ನು ಅಡವಿಟ್ಟು ಚುಂಬಿಸುವ ಬಯಕೆ.

ಮಂಜುಗಡ್ಡೆಯ ತುಂಡುಗಳನ್ನು ಡಬ್ಬದೊಳಗಿಟ್ಟು ಕೂಗುತ್ತ ನಡೆಯುವ
ಈ ಬಿಳೀಗಡ್ಡದ ವಯೋವೃದ್ಧನ ಬಿರುಕು ಬಿದ್ದ ಪಾದದ ಸಂದುಗಳೊಳಗೆ,
ಹಸಿವಿನ ತಲೆ ನೇವರಿಸುವ ಶ್ರಮದ ಕೃತಿಗಳ ಗ್ರಂಥಾಲಯವಿರಬಹುದೇ ?

ಭಾಷೆಯಿಲ್ಲದ ಬಾಯಿಗೆ ಮೊಲೆಯೂಡಿಸಿದ ಅವಳ ಸ್ತನತೊಟ್ಟಿನ ಭೂಮಿಯ ತುಂಬ
ಕೆಂಪೋಕೆಂಪು ಮರಗಿಡಗಳು.. ರಕುತದ ಹುಲ್ಲುಗಾವಲೊಂದರ ನಡುವಿನ ಗರಿಕೆಯ
ಮೊದಲ ಮಾತಿನ ಬಣ್ಣ.. ಬಸುರಾದ ಎರೆಹುಳುವಿನ ಚರ್ಮದಂತೆ ಬಿಳಿಯಾಗಿತ್ತು.

ಕಣ್ಣಪಾಪೆಯನ್ನೂ ಬಿಟ್ಟಿಲ್ಲ ಮೂರಕ್ಷರದ ಕಾನೂನು, ಎಲ್ಲವನ್ನೂ ಕಾಣುತ್ತದೆ..
ಜಗವನಾಳುವುದು ದೇಶಗಳಲ್ಲ, ಧರ್ಮಗಳಲ್ಲ, ಶಾಸ್ತ್ರಗಳಲ್ಲ, ಶಾಸನಗಳಲ್ಲ..
ಮೂರಕ್ಷರದ ಹಸಿವು.. ಎರಡೇ ಎರಡಕ್ಷರದ ಮಾತು ಬಾರದ ಪ್ರೇಮ.

ಟಿ.ಕೆ. ದಯಾನಂದ

No comments:

Post a Comment